MUSTHAFA HASAN ALQADRI OFFICIAL : 07/04/20

Translate

Saturday, July 4, 2020

ಕಾಲಚಕ್ರ ಉರುಳಿದ ವೇಗವೇ-The speed at which the wheel is rolling


 
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ  
ಸುಮಾರು 28 ವರ್ಷಗಳ ಹಿಂದೆ ಮರ್ಕಝ್ ಎಂಬ ಜ್ಞಾನ ಕೇಂದ್ರದಿಂದ ಬಿರುದು ಪಡೆದು ಮುದರ್ರಿಸಾಗಿ ಸೇವೆಗೆ ಸೇರಿದ ಪ್ರಾರಂಭದ ವರ್ಷಗಳ ಅನುಭವಗಳಿಂದ ಹೆಕ್ಕಿದಾಗ ನೆನಪಿಗೆ ಬಂದ ಒಂದು ಅನುಭವ.
ಒಂದು ದಿನ ಮಸೀದಿ ಪಕ್ಕದಲ್ಲಿದ್ದ ನನ್ನ ಕೊಠಡಿಯ ಬಾಗಿಲು ತೆರೆದಿದ್ದರೂ ಹೊರಗೆ ಬಾಗಿಲ ಹತ್ತಿರ ಯಾರೋ ಅತ್ಯಂತ ವಿನಯಾಶೀಲರಾಗಿ ಒಳಗೆ ಪ್ರವೇಶಿಸಲು ಅನುಮತಿಗಾಗಿ ಕಾಯುತ್ತಿದ್ದಂತೆ ಭಾಸವಾಯಿತು.
ನೋಡುವಾಗ ನಾಲ್ಕೈದು ಹಿರಿಯರು ಹಾಗೂ ಯುವಕರು.
ಹಣೆಯಲ್ಲಿ ಸುಜೂದಿನ ನಿಶಾನಿಯಿದೆ.ಮುಖದಲ್ಲಿ ದಾಡಿಯಿದೆ.ತಲೆಯಲ್ಲಿ ಪೇಟ ಮತ್ತು ಟೋಪಿಗಳಿವೆ.ಮುಖಬಾವದಲ್ಲಿ ಈಮಾನಿನ ಪ್ರಭೆ ಪ್ರಕಾಶಿಸುತ್ತಿದೆ.
ಅಪ್ಪಣೆ ಪಡೆದು ಬಹಳ ಶಿಸ್ತಿನಿಂದ ಒಳಪ್ರವೇಶಿಸಿದ ಅವರು ವಿನೀತನಾದ ನನ್ನ ಮುಸಾಫಹತ್ ಮಾಡಿ ಎಷ್ಟೇ ತಪ್ಪಿಸಿ ಕೊಳ್ಳಲು ಪ್ರಯತ್ನ ಪಟ್ಟರೂ ನನ್ನ ಕೈಗಳನ್ನು ಚುಂಬಿಸಿಬಿಟ್ಟರು. 
ಪಕ್ಕದಲ್ಲಿದ್ದ ಕುರ್ಚಿಗಳಲ್ಲಿ ಕೂರಲು ಒತ್ತಾಯ ಮಾಡಿದರೂ ಕೆಳಗೆ ಚಾಪೆಯ ಮೇಲೆಯೇ ಕುಳಿತು ಕೊಂಡರು.ನನಗೂ ಮುಜುಗರವಾಯಿತು.ಈ ಹಿರಿಯ ಮುತ್ಸದ್ದಿಗಳು ಕೆಳಗೆ ಕೂರುವಾಗ ನಾನೂ ನನ್ನ ಕುರ್ಚಿ ಬಿಟ್ಟು ಕೆಳಗೆ ಅವರೊಟ್ಟಿಗೆ ಕೂತು ಬಿಟ್ಟೆ.
ಅವರು ಅಲ್ಲಿನ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳಾಗಿದ್ದರು.
ಸಮಿತಿಯಲ್ಲಿ ತೆಗೆದು ಕೊಳ್ಳಬೇಕಾದ ಏನೋ ಒಂದು ತೀರ್ಮಾನದ ಬಗ್ಗೆ ಚರ್ಚಿಸಲು ಬಂದಿರುವುದಾಗಿತ್ತು.
ಅವರ ವಿನಯ,ವಿನಮ್ರತೆ ಹಾಗೂ ಇಲ್ಮ್ ಮತ್ತು ಇಲ್ಮಿನ ವಕ್ತಾರರೊಂದಿಗೆ ಅವರಿಗಿದ್ದ ಪ್ರೀತಿ,ಗೌರವಗಳನ್ನು ಕಂಡು ಅಚ್ಚರಿಯಾಯಿತು.
ಆಡಳಿತ ಸಮಿತಿಯಲ್ಲಿ ಅನೇಕ ವರ್ಷಗಳ ಅನುಭವ ಅವರಿಗಿದ್ದರೂ ತೀರ್ಮಾನಗಳನ್ನು ಕೈಗೊಳ್ಳುವಾಗ ಅವರಿಗಿದ್ದ ಜಾಗ್ರತೆ,ಕಾಳಜಿಗಳು ಆಶ್ಚರ್ಯಪಡಿಸುತ್ತಿತ್ತು.

ಎಷ್ಟೇ ಅನುಭವ,ಹಿರಿತನಗಳಿದ್ದರೂ ಇದು ಗ್ರಾಮ, ತಾಲೂಕು,ಜಿಲ್ಲಾ ಪಂಚಾಯತ್ ಗಳಲ್ಲ.ಅಸಂಬ್ಲಿ, ಪಾರ್ಲಿಮೆಂಟ್ ಗಳೂ ಅಲ್ಲ. ಇದು ಅಲ್ಲಾಹನ ಭವನಗಳ  ಖಿದ್ಮತ್ ಎಂಬ ಸಂಪೂರ್ಣ ಪರಿಜ್ಞಾನ ಹಾಗೂ ಅದಕ್ಕೆ ಬೇಕಾದ ಖುರ್ಆನ್ ಹೇಳಿದ ಯೋಗ್ಯತೆಗಳೂ ಅವರಲ್ಲಿ ಎದ್ದು ಕಾಣುತ್ತಿತ್ತು.

ಇದು ಅಂದಿನ ಕಾಲದ ಮಸೀದಿ ಮೊಹಲ್ಲಾ ಆಡಳಿತ ಸಮಿತಿಗಳ ಭಯಭಕ್ತಿ,ವಿನಯ ವಿನಮ್ರತೆ ಅರ್ಹತೆ ಯೋಗ್ಯತೆಗಳ ಒಂದು ಸಣ್ಣ ಉದಾಹರಣೆ ಮಾತ್ರ.

ಲಾಕ್ ಡೌನ್ ಎಂಬ ನೆಪವೊಡ್ಡಿ ಕೆಲವು ಕಡೆಗಳಲ್ಲಿ ಕೆಲವು ಜಪ್ಪಯ್ಯ ಆಡಳಿತ ಸಮಿತಿಗಳು ಇಲ್ಮಿನ ವಕ್ತಾರರಾದ ಉಸ್ತಾದರು ಗಳೊಂದಿಗೆ ನಡೆದು ಕೊಂಡ ಮೃಗೀಯ ರೀತಿ ನೋಡಿದಾಗ ಈ ಹಳೆಯ ಅನುಭವಗಳು ನೆನೆಪಿಗೆ ಬಂದವು.
ಕಾಲಚಕ್ರ ಸಂಚರಿಸಿದ ವೇಗವೇ ಎಂದನಿಸಿತು.

ನೌಕರನ ವೇತನವನ್ನು ಅವನ ಬೆವರು ಆರುವ ಮೊದಲು ಕೊಟ್ಟು ತೀರಿಸಬೇಕು ಎಂದು ಜಗತ್ತಿನಲ್ಲಿ ಮೊದಲ ಬಾರಿ ಆಜ್ಞಾಪಿಸಿ ವೇತನಾ ವ್ಯವಸ್ಥೆಗೆ ಉತ್ತಮ ರೂಪುರೇಷೆಗಳನ್ನು ಹಾಕಿ ಕೊಟ್ಟ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಯಾಯಿಗಳೆಂದು ಹೇಳುವವರಿಗೆ ಈ ಅಮಾನವೀಯ ವರ್ತನೆ ಹೇಗೆ ಸಾಧ್ಯ ಎಂಬುದೇ ಅರ್ಥವಾಗದ ಸಂಗತಿ.

ನೌಕರರ ವೇತನಕ್ಕೆ ಸಂಬಂಧಿಸಿದಂತೆ ಶರೀಅತಿನಲ್ಲೂ ಕಾನೂನಿನಲ್ಲೂ ಬೇಕಾದ ರೀತಿ,ರಿವಾಜು,ನಿಬಂಧನೆಗಳಿವೆ. ಅದ್ಯಾವುದನ್ನೂ ಪರಿಗಣಿಸದೆ ಆಡಳಿತ ಸಮಿತಿಯಲ್ಲಿ ಸಭೆ ನಡೆಸದೆ,ಮೊಹಲ್ಲಾ ನಿವಾಸಿಗಳಲ್ಲಿ ಸಮಾಲೋಚಿಸದೆ ಯಾವುದೇ ಆಗುಹೋಗುಗಳ ಬಗ್ಗೆ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಗೂ ತಯ್ಯಾರಾಗದೆ ಒಂದಿಬ್ಬರು ಮಾತ್ರ ಸೇರಿ ಲಾಕ್ ಡೌನ್ ಎಂಬ ಏಕೈಕ ಕಾರಣ ಹೇಳಿ ಉಸ್ತಾದರುಗಳ ಹಕ್ಕುಗಳನ್ನು ನಿಷೇದಿಸುವ ವರ್ತನೆ ಅಕ್ಷಮ್ಯ ಅಪರಾಧವೆನ್ನದೆ ವಿಧಿಯಿಲ್ಲ.

ಇಲ್ಲಿ ಜಪ್ಪಯ್ಯ ಆಡಳಿತ ಸಮಿತಿಯಗಳು ಎಂಬ ಪದ ಪ್ರಯೋಗಿಸಿರುವುದು ಮನಃಪೂರ್ವಕವೇ. 
ಯಾಕೆಂದರೆ ಈಗಿನ ಬಹುತೇಕ ಆಡಳಿತ ಸಮಿತಿಗಳು ನಿಜವಾಗಿಯೂ ಜಪ್ಪಯ್ಯಗಳೇ. 
ಇದನ್ನು ಬಿಚ್ಚಿ ಹೇಳುವುದರಲ್ಲಿ ಯಾವುದೇ ಮುಲಾಜಿ ತೋರಬೇಕಾದ ಅಗತ್ಯವಿಲ್ಲ.
ಅವರಿಗೆ ಅವರ ಸೇವೆಯ ಜವಾಬ್ದಾರಿಗಳ ಬಗ್ಗೆ ಯಾವುದೇ ಪ್ರಾಥಮಿಕ ಅರಿವೂ ಇಲ್ಲ.
ತಮ್ಮ ಜವಾಬ್ದಾರಿಗಳು ಮೊಹಲ್ಲಾ ನಿವಾಸಿಗಳು ನೀಡುವ ಚಂದಾವಗೈರೆಗಳನ್ನು ಪಡೆದು ಅದನ್ನು ಖರ್ಚು ಮಾಡುವುದಕ್ಕೆ ಮಾತ್ರ ಸೀಮಿತ ಎಂದು ಭಾವಿಸಿರುತ್ತಾರೆ.

ಯಾವುದೇ ಒಂದು ಸಮಿತಿ ಅಥವಾ ಸಂಸ್ಥೆಯಲ್ಲಿ ಸಂಪತ್ತು ಕ್ರೋಡೀಕರಣ ದೊಡ್ಡ ಜವಾಬ್ದಾರಿಯ ಕೆಲಸ.
ಅದಿಲ್ಲದೆ ಯಾವುದೇ ಕೆಲಸಗಳು ಮಾಡಲು ಸಾಧ್ಯವಿಲ್ಲ.
ಆದರೆ ಮೊಹಲ್ಲಾ ಆಡಳಿತ ಸಮತಿಗಳಲ್ಲಿ ಇದು ಬಹಳ ಸುಲಭ.
ಯಾಕೆಂದರೆ ಯಾವುದೇ ಒಂದು ಬೀಡಿ ಕಟ್ಟಿ ಜೀವನ ಸಾಗಿಸುವ ಕಡು ಬಡತನದ ಕುಟುಂಬವಾಗಿದ್ದರೂ ಮಸೀದಿ,ಮದ್ರಸ,ಉಸ್ತಾದರುಗಳ ವಿಷಯಗಳಿಗೆ ಸಂಬಂಧಿಸಿದಂತೆ ತಿರುಗಿ ನೋಡುವುದೇ ಇಲ್ಲ.
ತಮ್ಮಿಂದಾಗುವ ಕನಿಷ್ಠ ಸಹಾಯವನ್ನಾದರೂ ನೀಡಲು ಮುಂದಾಗುತ್ತಾರೆ.ಉಳಿದವರ ವಿಷಯ ಹೇಳಬೇಕಾಗಿಲ್ಲ.

ಇದರಿಂದಾಗಿಯೇ ಅನೇಕ ಮೊಹಲ್ಲಾಗಳಲ್ಲಿ ಲಾಕ್ ಡೌನಿನ ಕೆಲಸಕಾರ್ಯಗಳು ಇಲ್ಲದ ಅತಿ ಸಂಕಷ್ಟದ ಈ ರಂಝಾನಿನಲ್ಲಿ ಕೂಡಾ ಇತರ ರಂಝಾನುಗಳಿಗಿಂತ ಹೆಚ್ಚು ಹಣ ಸಂಗ್ರಹ ಮಾಡಿ ಉಸ್ತಾದರುಗಳ ಕಷ್ಟಗಳಿಗೆ ಸ್ಪಂದಿಸಿದ ಉದಾಹರಣೆಗಳಿವೆ.
ವಾಸ್ತವದಲ್ಲಿ ರಂಝಾನಿನಲ್ಲಿ ಉಸ್ತಾದರುಗಳಿಗೆ ನೀಡುವುದು ಒಂದು ಗೌರವ ಧನವಾಗಿದೆ.ಅದಕ್ಕೆ ಅವರು ರಂಝಾನಿನಲ್ಲಿ ಕೆಲಸ ಮಾಡಿದ್ದಾರೋ ಇಲ್ಲವೋ ಎಂಬ ಮಾನದಂಡವಿಲ್ಲ.

ಆದರೆ ಇದಕ್ಕೆಲ್ಲಾ ವಿಶಾಲ ಮನಸ್ಸು ಹಾಗೂ ಇಚ್ಚಾಶಕ್ತಿ ಆಡಳಿತ ಸಮಿತಿಗಳಿಗೆ ಬೇಕು.
ಆಡಳಿತಗಾರರು ಎಂಬ ಹಂಗಿನಲ್ಲಿ ಕಚೇರಿಗಳಲ್ಲಿ ಜಪ್ಪಯ್ಯಗಳಾದರೆ ಇದು ನಡೆಯಲು ಸಾಧ್ಯವಿಲ್ಲ. ಕಚೇರಿಗಳಿಂದ ಹೊರ ಬಂದು ಮೊಹಲ್ಲಾಗಳಲ್ಲಿ ಇಳಿದು ಸುತ್ತಾಡಿ ಕಾರ್ಯಪ್ರವರವೃತ್ತರಾಗಬೇಕು.
ವಿಷಯಗಳನ್ನು ಮನಸ್ಸುಗಳಿಗೆ ಮನದಟ್ಟು ಮಾಡಿಕೊಡಬೇಕು.
ಆಗ ಮಾತ್ರ ಅವರು ನಿಜವಾದ ಖಾದಿಮ್ ಸೇವಕರಾಗುವುದು.

ಹಿಂದಿನ ಕಾಲದಲ್ಲಿ ಮಾತ್ರವಲ್ಲ ಈಗಿನ ಕಾಲದಲ್ಲೂ ಅನೇಕ ಮೊಹಲ್ಲಾಗಳಲ್ಲಿ ಹಾಕಿದ ಪದ್ಧತಿಗಳಲ್ಲಿ ಮೊಹಲ್ಲಾಗಳ ಪಾತ್ರವೇ ಮೇಲು. 
ರಂಝಾನಿನಲ್ಲಿ ಉಸ್ತಾದರುಗಳಿಗೆ ನೀಡುವ ಸಹಾಯ ನಿಧಿಯಾಗಲೀ ಇತರ ಯಾವುದೇ ಪದ್ಧತಿಯಾಗಲಿ ಮೊಹಲ್ಲಾದ ನಾಯಕತ್ವ ಮೊಹಲ್ಲಾದಲ್ಲಿ ಒಂದು ಸುತ್ತು ಹಾಕಿದರೆ ಯಶಸ್ವಿಯಾಗದ ಯಾವುದೇ ಪದ್ದತಿಗಳಿಲ್ಲ.
ಯಾಕೆಂದರೆ ಮುಸ್ಲಿಮ್ ಉಮ್ಮತ್ತಿನ ಮನಸ್ಸು ಅತ್ಯಂತ ಕರುಣಾಮಯಿ ಹಾಗೂ ವಿಶಾಲವಾದದ್ದಾಗಿರುತ್ತದೆ.

ಇದಕ್ಕೆಲ್ಲಾ ಆಡಳಿತಗಾರರು ಎಂಬ ಅಹಂನಿಂದ ಮುಕ್ತವಾಗಿ ನಾವು ಅಲ್ಲಾಹನ ಭವನದ ಹಾಗೂ ಸಮಾಜದ ಸೇವಕರು ಎಂಬ ಮನೋಭಾವವಿರುವ ಆಡಳಿತ ಸಮಿತಿಗಳು ಬೇಕು.
ಅನ್ಯಾಯ ಅನೀತಿಗಳು ಇಲ್ಲಿ ಒಂದು ವೇಳೆ ಮೇಳೈಸ ಬಹುದು.ಆದರೆ ಎಲ್ಲಾ ಸತ್ಯಾಸತ್ಯತೆ ಗಳು ಪ್ರತ್ಯಕ್ಷವಾಗುವ ಇನ್ನೊಂದು ಭಯಾನಕ ಲೋಕವಿದೆ ಎಂಬ ನೆನಪು ಮಾತ್ರ ಎಲ್ಲರಿಗೂ ಇರುವುದು ಅತಿ ಅನಿವಾರ್ಯವಾಗಿದೆ.

ಯಾಕೆಂದರೆ ಈ ಅನಿರೀಕ್ಷಿತ ಲಾಕ್ ಡೌನ್ ಕಾಲದಲ್ಲಿ ಕೆಲವು ಉಸ್ತಾದರುಗಳು ಅನುಭವಿಸಿದ ಯಾತನೆಗಳು ಕೇಳಿದರೆ ಕಣ್ಣೀರು ಸುರಿಸದಿರಲು ಸಾಧ್ಯವಿಲ್ಲ.
ಈ ಆಡಳಿತ ಸಮಿತಿಯವರ ನಿಷ್ಟೂರ ವರ್ತನೆ ಒಂದು ಕಡೆಯಾದರೆ ಜಮಾಅತರಲ್ಲಿ ಹೇಳುವುದೋ ಬಿಡುವುದೋ ಹೇಳಿದರೆ ಜಮಾಅತಿನಲ್ಲಿ ಬಿನ್ನತೆಯುಂಟಾಗ ಬಹುದೋ ಎಂಬ ಭಯ ಮತ್ತೊಂದು ಕಡೆ. 
ಖರ್ಚಿಗೆ ಕಾಸಿಲ್ಲದೆ ಎಲ್ಲಿಗಾದರೂ ಹೋಗಿ ಯಾರತ್ರವಾದರೂ ಸಹಾಯ ಪಡೆಯಬಹುದು ಎಂದರೆ ಮನೆಯಿಂದ ಹೊರಡಲಾಗದೆ ಉಸಿರುಗಟ್ಟಿದ ವಾತಾವರಣದಲ್ಲಿ ಜೀವನ ಸಾಗಿಸ ಬೇಕಾದ ದುಸ್ಥಿಯಲ್ಲಿರುವುದನ್ನು ಕಂಡೂ ಕಾಣದಂತೆ ನಟಿಸಿದರೆ ಅದರ ಪರಿಣಾಮ ಫಲ ಜಮಾಅತರೆಲ್ಲರಿಗೂ ತಟ್ಟದಿರಲಿ ಎಂಬುದೇ ಎಲ್ಲರ ಅಭಿಲಾಷೆ.
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...