Featured
- Get link
- X
- Other Apps
ಮರೆಯಾಗುತ್ತಿರುವ ಸ್ಫೂರ್ತಿದಾಯಕ ನಾಯಕರು
ಮರೆಯಾಗುತ್ತಿರುವ ಸ್ಫೂರ್ತಿದಾಯಕ ನಾಯಕರು
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ
1990-92ನೇ ಇಸವಿಯ ಆಸುಪಾಸು.
ವಿನೀತನಾದ ನಾನು ವಿದ್ಯಾರ್ಥಿ ಜೀವನಕ್ಕೆ ವಿದಾಯ ಹೇಳಿ ಸೇವಾ ರಂಗಕ್ಕೆ ಪ್ರವೇಶಿಸಿ ಕನ್ನಂಗಾರಿನಲ್ಲಿ ಸೇವೆಯನ್ನು ಪ್ರಾರಂಭಿಸಿದ ಆರಂಭದ ದಿನಗಳದು.
ಅಂದಿನ ಯುವ ವಿದ್ವಾಂಸರಲ್ಲಿ ಹೊಸ ಚಳುವಳಿಯ ಮನೋಭಾವ ಹುಟ್ಟಿಕೊಂಡು
ಕನ್ನಡ ಮಣ್ಣಿನಲ್ಲಿ ಏನಾದರೂ ಸಂಘಟನಾ ಚಾಲನೆ ಸೃಷ್ಟಿ ಮಾಡಬೇಕೆಂಬ ಆವೇಶ ಗರಿಗೆದರಿದ ಕಾಲವದು.
ವರ್ಷಗಟ್ಟಲೆ ಕೇರಳದ ವಿವಿಧ ವಿದ್ಯಾಲಯಗಳಲ್ಲಿ ಕಲಿತು ಅಲ್ಲಿನ ಸಂಘಟನಾ ಚೈತನ್ಯವನ್ನು ಕಂಡು ಪ್ರಚೋದನೆಗೊಂಡು ಈ ಚಳುವಳಿಯ ಮನೋಭಾವ ಅವರಲ್ಲಿ ಹುಟ್ಟಿಕೊಂಡಿತ್ತು.
ನಮ್ಮ ನೆಲದಲ್ಲಿ ಏನಾದರೂ ಮಾಡಲೇಬೇಕು ಎಂಬ ಹಂಬಲ ಒಂದು ಕಡೆಯಾದರೆ ಏನು,ಹೇಗೆ ಎಲ್ಲಿಂದ ಪ್ರಾರಂಭಿಸುವುದು ಎಂಬಿತ್ಯಾದಿ ಕುತೂಹಲಗಳು ಮತ್ತೊಂದೆಡೆಯಾಗಿತ್ತು.
ಆದರೆ ಮೊದಲ ಆಯ್ಕೆ ಮದ್ರಸಾ ಸುಧಾರಣಾ ಚಳುವಳಿಯಾಗಿತ್ತು.
ಇದರ ಭಾಗವೆಂಬಂತೆ
ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಇದರ ಮದ್ರಸಾ ಹಾಗೂ ರೇಂಜ್ ಗಳು ಮಂಗಳೂರಿನ ಆಸುಪಾಸಿನಲ್ಲಿ ಅನೇಕ ಕಡೆಗಳಲ್ಲಿ ಆಗಲೇ ಕಾರ್ಯಾಚರಿಸುತ್ತಿತ್ತು.
ಆದರೆ ಅದು ಕರಾವಳಿಯ ಭಾಗದಲ್ಲಿ ಮಾತ್ರ ಸುರತ್ಕಲ್ ನಲ್ಲಿ ಕೊನೆಗೊಂಡಿತ್ತು.
ಅಂದು ಉಡುಪಿ ಜಿಲ್ಲೆಯಾಗಿರಲಿಲ್ಲ.
ಕುಂದಾಪುರ, ಕಾರ್ಕಳ,ಉಡುಪಿ ಈ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸೇರಿತ್ತು.
ನೂತನ ಕಾರ್ಯಾಚರಣೆಯನ್ನು ಇಲ್ಲಿಂದಲೇ ಪ್ರಾರಂಭಿಸುವ ಉದ್ದೇಶದಿಂದ ಮದ್ರಸಾ ಸುಧಾರಣೆ ಎಂಬ ಪದ್ದತಿಯನ್ನು ಕೈಗೆತ್ತಿಕೊಂಡು ಹಿರಿಯ ಮುತ್ಸದ್ದಿಯಾಗಿದ್ದ ಕನ್ನಂಗಾರು ಮುಕ್ರಿ ಹಾಜಿ ಯವರೊಂದಿಗೆ ಮಾತನಾಡಿ ಒಂದು ಗಾಡಿ ಹಿಡಿದು ಉಡುಪಿ, ಕುಂದಾಪುರ ಕಾರ್ಕಳ ತಾಲೂಕುಗಳಲ್ಲಿನ ವಿವಿಧ ಮೊಹಲ್ಲಾಗಳಲ್ಲಿ ಸಂಚರಿಸಿ ಎಲ್ಲಾ ಮದರಸಗಳನ್ನು ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಅಂಗೀಕರಿಸಿ ಕನ್ನಂಗಾರ್ ರೇಂಜ್ ರೂಪೀಕರಿಸಲಾಯ್ತು.
ಇದರಲ್ಲಿ ಕನ್ನಂಗಾರು ಮುಕ್ತಿ ಹಾಜಿಯವರ ಪ್ರಭಾವ ಹಾಗೂ ಶ್ರಮ ತುಂಬಾ ಕೆಲಸ ಮಾಡಿದೆ ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ.
ಯಾಕೆಂದರೆ ಅವರು ಅಂದು ಆ ಭಾಗದಲ್ಲಿ ಅಷ್ಟು ಪ್ರಭಾವೀ ವ್ಯಕ್ತಿ ಮಾತ್ರವಲ್ಲದೆ ಬಹಳ ಹಿಂದಿನಿಂದಲೇ ಬಹು ತಾಜುಲ್ ಉಲಮಾ (ನ.ಮ) ಸೇರಿ ಕೇರಳದ ಬಹುತೇಕ ವಿದ್ವಾಂಸರೊಂದಿಗೆ ಅತಿಯಾದ ಗೌರವ ಹಾಗೂ ನಿಕಟ ಸಂಪರ್ಕ ಹೊಂದಿದವರಾಗಿದ್ದರು.
ಹೀಗೆ ಸುರತ್ಕಲ್ ನಲ್ಲಿ ಕೊನೆಗೊಂಡಿದ್ದ ಸುನ್ನೀ ರೇಂಜ್ ಕಾರ್ಯಾಚರಣೆಯನ್ನು ಕನ್ನಂಗಾರ್ ರೇಂಜ್ ನ ಮೂಲಕ ಮತ್ತೆ ತನ್ನ ಜೈತ್ರಯಾತ್ರೆ ಯನ್ನು ಮುಂದುವರಿಸಲಾಯಿತು.
ಅಂದಿನ ಕನ್ನಂಗಾರ್ ರೇಂಜ್ ಅಂದರೆ ಹೊನ್ನಾವರ,ಸಾಗರ,ತೀರ್ಥಹಳ್ಳಿ,ಕಾರ್ಕಳ, ಮೂಡಬಿದ್ರೆ ಮುಂತಾದ ಪ್ರದೇಶಗಳಿಗೆಲ್ಲಾ ಇದೇ ಒಂದು ರೇಂಜಾಗಿತ್ತು.
ಅಂದು ಆ ಭಾಗದ ಬಹುತೇಕ ಮದ್ರಸಗಳೆಲ್ಲಾ ಈ ರೇಂಜಿನಲ್ಲಿ ಸೇರಿದ್ದವು.
ಆದರೆ ಆ ಎಲ್ಲಾ ಮದ್ರಸಗಳು ಅದುವರೆಗೆ ಯಾವುದೇ ಬೋರ್ಡಿನಲ್ಲಿ ಅಂಗೀಕಾರ ಪಡೆದ ಮದ್ರಸಗಳಾಗಿರಲಿಲ್ಲ.
ಸ್ವತಂತ್ರವಾಗಿ ಕಾರ್ಯಾಚರಿಸುತ್ತಿದ್ದ ಮದ್ರಸಗಳಾಗಿದ್ದವು.
ಆದರೆ ಇವತ್ತು ಆ ಒಂದು ರೇಂಜಿನ ಕಾರಣದಿಂದ ಅದೆಷ್ಟೋ ರೇಂಜ್ ಗಳು ಹುಟ್ಟಿ ಅದೆಷ್ಟೋ ಮದ್ರಸಗಳಾಗಿ ಪರಿವರ್ತನೆ ಗೊಂಡು ಸಕ್ರಿಯವಾಗಿ ಮುಂದುವರಿಯುತ್ತಿವೆ.
ಅಲ್ಹಮ್ದುಲಿಲ್ಲಾಹ್ ಸುಮ್ಮ ಅಲ್ಹಮ್ದುಲಿಲ್ಲಾಹ್.
ಇನ್ನು ಸಂಘಟನಾ ಚಳುವಳಿಯ ವಿಷಯಕ್ಕೆ ಬರುವುದಾದರೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಸೀಮಿತಗೊಂಡಿದ್ದ ಎಸ್ಸೆಸ್ಸೆಫ್ ಎಸ್ವೈಎಸ್ ಸಹಿತವಿರುವ ನಮ್ಮೆಲ್ಲಾ ಸಂಘಟನೆಗಳನ್ನು ಕರ್ನಾಟಕದ ಇತರ ಪ್ರದೇಶಗಳಿಗೆ ವ್ಯಾಪಿಸುವುದರಲ್ಲಿ ಅಂದಿನ ಸಂಘಟನಾ ಚಳುವಳಿಯೇ ಮುಖ್ಯ ಪಾತ್ರ ವಹಿಸಿತ್ತು.
ನಾನಿದಿಷ್ಟು ಬರೆಯಲು ಕಾರಣ ಅಂದಿನ ಯುವ ವಿದ್ವಾಂಸರಿಗೆ ಹಾಗೂ ಯುವ ನಾಯಕರಿಗೆ ಈ ಚಳುವಳಿಯಲ್ಲಿ ಸ್ಫೂರ್ತಿ ನೀಡುತ್ತಿದ್ದ ಅನೇಕ ಉಲಮಾ ಉಮರಾ ನಾಯಕರು ಇಂದು ನಮ್ಮೊಂದಿಗಿಲ್ಲ.
ಅವರೆಲ್ಲಾ ಜೀವನ ಪಯಣ ಮುಗಿಸಿ
ಇನ್ನೊಂದು ಲೋಕದ ಖಬ್ರಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.
ಅವರಲ್ಲಿ ಪ್ರಮುಖರಾಗಿದ್ದ ಹಿರಿಯ ವಿದ್ವಾಂಸರೂ ಸುನ್ನೀ ಜಗತ್ತಿನ ಅಭಿಮಾನವೂ ಆಗಿದ್ದ ತಾಜುಲ್ ಫುಖಹಾ,ಶರಫುಲ್ ಉಲಮಾ,ಬಹು ಟಿ.ಹೆಚ್ ಉಸ್ತಾದ್ ಮುಂತಾದ ಅಗ್ರಗಣ್ಯ ಉಲಮಾಗಳು ನಾಯಕತ್ವ ನೀಡುತ್ತಿದ್ದರು.
ಅದೇ ರೀತಿ ಇದಕ್ಕಾಗಿ ಬಿಡುವಿಲ್ಲದೆ ಓಡಾಡುತ್ತಿದ್ದ ಬಹು ಆತೂರು ಸಅದ್ ಮುಸ್ಲಿಯಾರ್,ನೆಕ್ಕಿಲಾಡಿ ಇಸ್ಮಾಈಲ್ ಮದನಿ,ಸೂರಿಂಜೆ ಅಬ್ದುರ್ರಹ್ಮಾನ್ ಮುಸ್ಲಿಯಾರ್,ಇಂಜಿನಿಯರ್ ಎಸ್.ಅಬ್ದುರ್ರಹ್ಮಾನ್ ಸರ್,ಕಾಬೆಟ್ಟು ಆಹ್ಮದ್ ಮುಸ್ಲಿಯಾರ್.
ಅತ್ತ ಕೇರಳದಿಂದ ಈ ಚಳುವಳಿಯಲ್ಲಿ ಭಾಗಿಯಾಗಿದ್ದ ಶಾಹುಲ್ ಹಮೀದ್ ಬಾಖವಿ ಶಾಂತಪುರಂ,ಪಿ,ಪಿ, ಉಸ್ತಾದ್ ಪಾರನ್ನೂರು,ಪಡಿಞಾರತ್ತರ ಉಸ್ತಾದ್, ಮುಂತಾದವರಾಗಿದ್ದರು.
ಇಲ್ಲಿನ ಮದ್ರಸಾ ಚಳುವಳಿಯಲ್ಲಿ ನೆಕ್ಕಿಲಾಡಿ ಮತ್ತು ಆತೂರು ಉಸ್ತಾದರು ಗಳ ಹೆಸರು ಪ್ರಸ್ತಾಪಿಸದೆ ಪೂರ್ಣವಾಗಲು ಸಾಧ್ಯವಿಲ್ಲ.
ಅವರೆಲ್ಲಾ ಇಂದು ಒಬ್ಬರ ಹಿಂದೆ ಒಬ್ಬರಾಗಿ ಮರೆಯಾಗಿ ನಮ್ಮ ಸಂಘಟನಾ ವಲಯದಲ್ಲಿ ಶೂನ್ಯತಾ ಮನೋಭಾವಕ್ಕೆ ಕಾರಣರಾಗಿದ್ದಾರೆ.
ಕೊನೆಯದಾಗಿ ಇದೀಗ ಮಂಗಳೂರು ಬಹು ಇಬ್ರಾಹಿಮ್ ಬಾವಾ ಹಾಜಿಯವರು.(ನವರಲ್ಲಾಹು ಮರಾಖಿದಹುಮ್),
ಇಲ್ಲಿ ಚಿಂತೆಗೀಡು ಮಾಡುವ ವಿಷಯವೇನೆಂದರೆ ಇವರೆಲ್ಲರ ನಿರ್ಗಮನವು ಶೂನ್ಯತೆಯನ್ನು ಸೃಷ್ಟಿ ಮಾಡುತ್ತದೆಯೇ ಹೊರತು ಅವರ ಜಾಗವನ್ನು ತುಂಬುವ ಮತ್ತೊಬ್ಬರ ಸೃಷ್ಟಯಾಗುವುದಿಲ್ಲ ಎಂಬುದಾಗಿದೆ.
ಬಹು ಬಾವಾ ಹಾಜಿಯವರು ಮಂಗಳೂರಿನಲ್ಲಿ ಅಜಾತ ಶತ್ರುವಾಗಿ ಜೀವಿಸಿ ಎಲ್ಲರ,ಎಲ್ಲಾ ವಿಭಾಗದ ಜನರ ಅಚ್ಚು ಮೆಚ್ಚಿನ ಉಮರಾ ನಾಯಕರಾಗಿದ್ದರು.
ಆದರೆ ಸುನ್ನಿಯತ್ತಿನ ವಿಚಾರದಲ್ಲಿ ಯಾವುದೇ ರೀತಿಯ ರಾಜಿಗೆ ಸಿದ್ದರಿಲ್ಲದ ಅಪ್ರತಿಮ ನಾಯಕರಾಗಿದ್ದರು.
ಅದೂ ಅಲ್ಲದೆ ಇಲ್ಲಿನ ಎಲ್ಲಾ ಸುನ್ನೀ ಸಾಹಿತ್ಯ,ಸಂಘಟನೆ,
ಸಂಸ್ಥೆಗಳ ಬೆಳವಣಿಗೆಗಳಲ್ಲಿ ಅವರ ಕೊಡುಗೆ ಅಪಾರವಾಗಿತ್ತು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗಲ್ಲದೆ ತಿಳಿದಿರಲು ಸಾಧ್ಯವಿಲ್ಲ.
ಅದೂ ಅಲ್ಲದೆ ಸುನ್ನಿಯತ್ತಿಗೆ ಎಲ್ಲಿಯಾದರೂ ಏನಾದರೂ ಯಾರಿಂದಲಾದರೂ ಒಂದು ನ್ಯೂನತೆ ಸಂಭವಿಸುವುದನ್ನು ಅವರು ಸಹಿಸುತ್ತಿರಲಿಲ್ಲ. ಅಂತಹ ಅಪಾಯ ಕಂಡು ಬಂದರೆ ತಕ್ಷಣ ಅದರ ಬಗ್ಗೆ ಎಚ್ಚೆತ್ತು ಕೊಂಡು ಬೇಕಾದುದನ್ನು ಮಾಡುತ್ತಿದ್ದರು ಸಂಬಂಧ ಪಟ್ಟವರಿಂದ ಮಾಡಿಸುತ್ತಿದ್ದರು.
ಮಾತ್ರವಲ್ಲ ಇಲ್ಲಿನ ಸುನ್ನೀ ಚಳುವಳಿಗೆ ಬೇಕಾದ ಆರ್ಥಿಕ ನೆರವು ನೀಡುವುದರಲ್ಲಿ ಮತ್ತು ಮಂಗಳೂರು ಮರ್ಹೂಮ್ ಹಸನ್ ಹಾಜಿ ಫ್ಯಾಮಿಲಿ ಸೇರಿ ಅನೇಕ ಶ್ರೀಮಂತರಿಂದ ಆರ್ಥಿಕ ನೆರವು ದೊರಕಿಸಿಕೊಡುವುದರಲ್ಲಿ ಮುಖ್ಯ ಪಾತ್ರ ವಹಿಸಿ ಇಂದಿನ ಎಲ್ಲಾ ಬೆಳವಣಿಗೆಗಳಲ್ಲಿ ಅವರೂ ಕಾರಣ ಕರ್ತರಾಗಿದ್ದಾರೆ.
ಆದ್ದರಿಂದ ಇಂದಿನ ಸಂಪತ್ಬರಿತ ತಲೆಮಾರಿನ ಯುವ ವಿದ್ವಾಂಸರು, ಲೇಖಕರು, ಭಾಷಣ ಗಾರರು,ಸಂಘಟನಾ ನಾಯಕರು, ಕಾರ್ಯಕರ್ತರೆಲ್ಲರೂ ಇವರು ನಡೆದು ಹೋದ ಹೆಜ್ಜೆ ಗುರುತುಗಳಲ್ಲಿ ನಿಸ್ವಾರ್ಥತೆಯಿಂದ ಹೆಜ್ಜೆಯಿಟ್ಟು ಮುಂದುವರಿಯ ಬೇಕಾಗಿದೆ.
ಅಲ್ಲದೆ ಈ ಕಳೆದು ಹೋಗುತ್ತಿರುವ ತಲೆಮಾರಿನ ಕುರುಹುಗಳನ್ನು ನಂತರದ ತಲೆಮಾರಿಗೆ ತಿಳಿಸಿ ಕೊಡುವ ಪ್ರಯತ್ನವನ್ನೂ ಮಾಡಬೇಕಾಗಿದೆ.
ಮರೆಯಾದ ನಮ್ಮ ಪೂರ್ವಿಕರ ಪದವಿಗಳನ್ನು ಅಲ್ಲಾಹು ಉನ್ನತಿಗೇರಿಸಲಿ.
ಅವರನ್ನೂ ನಮ್ಮನ್ನೂ ಸ್ವರ್ಗದಲ್ಲಿ ಒಟ್ಟು ಸೇರಿಸಲಿ.ಅವರ ಮಾರ್ಗದಲ್ಲಿ ಸಂಚರಿಸಲು ತೌಫೀಖ್ ನೀಡಲಿ. ಅಮೀನ್.
Popular Posts
ಆಪತ್ಭಾಂದವರು ಅಪನಂಬಿಗಸ್ತರಾದರೇ-Are the pessimists distrustful?
- Get link
- X
- Other Apps
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ?-Why this injustice with dead bodies?
- Get link
- X
- Other Apps
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ
- Get link
- X
- Other Apps
ಅನೈತಿಕತೆ ಹಾಗೂ ಕೆಟ್ಟದ್ದನ್ನು ನಿಷೇಧಿಸುವ ವಿಶೇಷ ಪ್ರಾರ್ಥನೆ ಗಳಲ್ಲಿ ಒಂದಾಗಿದೆ
- Get link
- X
- Other Apps
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ-Don't look over the shoulder when a pumpkin is stolen
- Get link
- X
- Other Apps
ಜೇನಿನಲ್ಲಿಲ್ಲದ ಸಿಹಿ ಸ್ವಲಾತಿನ ಕಣಗಳಲ್ಲಿದೆ
- Get link
- X
- Other Apps
Comments